ಮೂಲಭೂತ ಸೌಕರ್ಯಗಳ ಬೇಡಿಕೆ ಈಡೆರಸಲು ಸರಕಾರದ ಬಳಿ ಹಣವಿಲ್ಲ: ಶಾಸಕ ಬಾಲಚಂದ್ರ ಜಾರಕಿಹೋಳಿ ಅಸಮಾಧಾನ
ಅರಭಾವಿ – ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಉಂಟಾಗುತ್ತಿದ್ದು, ಅರಭಾವಿ ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಅನುದಾನ ತರಲು ಪ್ರಯತ್ನ ಮಾಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು.
ಪಟ್ಟಣದ ಆಂಜನೇಯ ದೇವಸ್ಥಾನದ ಹತ್ತಿರ ಈಚೆಗೆ
ಪ.ಜಾ / ಪ.ಪಂ. ಮತ್ತು ಇತರೆ ಬಡ ಜನಾಂಗದವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ತನ್ನ ಪಂಚ ಭಾಗ್ಯಗಳಿಗೆ ಅನುದಾನ ನೀಡುತ್ತಿರುವುದರಿಂದ ನಮ್ಮ ಕ್ಷೇತ್ರದ ಹೊಸ ಅಭಿವೃದ್ಧಿ ಕಾರ್ಯಗಳಿಗೆ ಯಾವ ಅನುದಾನಗಳು ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅರಭಾವಿ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನದ ನಿರೀಕ್ಷೆ ಮಾಡಲಾಗಿದೆ. ರಸ್ತೆ ಸುಧಾರಣೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಹಲವು ಬೇಡಿಕೆಗಳನ್ನೂ ಸಾರ್ವಜನಿಕರು ಇಟ್ಟಿದ್ದಾರೆ. ಆದರೆ ಇವುಗಳನ್ನು ಈಡೇರಿಸಲು ಸರ್ಕಾರದ ಬಳಿ ಹಣವಿಲ್ಲ. ಆದರೂ ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಯೋಜನೆಯಡಿ ೫ ಕೋಟಿ ರೂಪಾಯಿ ಅನುದಾನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಅವರು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಅಮೃತ ನಗರೋತ್ಥಾನ ಹಂತ – ೪ ರ ಅಡಿ ಪ. ಜಾ, ಪ. ಪಂ. ಮತ್ತು ಇತರೆ ಬಡ ಜನಾಂಗದ ಸುಮಾರು ೧೯೯ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
ಪೌರ ಕಾರ್ಮಿಕರಾದ ಶಾನೂರು ಬಾಳಪ್ಪ ಹರಿಜನ, ಮಹಾದೇವ ಭೀಮಪ್ಪ ಮಾದರ ಮತ್ತು ನಿಂಗಪ್ಪ ಭೀಮಪ್ಪ ಕಡ್ಡಿ ತಲಾ ಅವರಿಗೆ ೭.೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಗಳ ಕಟ್ಟಡ ನಿರ್ಮಾಣದ ಆದೇಶ ಪತ್ರಗಳನ್ನು ವಿತರಿಸಿದರು.
ವೇ. ಮೂ. ಶಿವಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.
ಪಟ್ಟಣ ಪಂಚಾಯತ ಅಧ್ಯಕ್ಷೆ ರೇಣುಕಾ ಮಾದರ, ಉಪಾಧ್ಯಕ್ಷೆ ರಾಜಶ್ರೀ ಗಂಗಣ್ಣವರ, ಮುಖಂಡರಾದ ಶಂಕರ ಬಿಲಕುಂದೀ, ಮುತ್ತಪ್ಪ ಜಲ್ಲಿ, ಮಹಾಂತೇಶ ನೇಮಗೌಡರ, ಭೀಮಶಿ ಹಳ್ಳೂರ, ನಿಂಗಪ್ಪ ಇಳಿಗೇರಿ, ರಮೇಶ ಮಾದರ,ಕೃಷ್ಣ ಬಂಡಿವಡ್ಡರ, ಯಲ್ಲಪ್ಪ ಸತ್ತಿಗೇರಿ, ಸಾತಪ್ಪ ಜೈನ್, ಕೆಂಚಪ್ಪ ಮಂಟೂರ, ಅಡಿವೆಪ್ಪ ಬಿಲಕುಂದಿ, ರಮೇಶ ಸಂಪಗಾವ, ಸಿದ್ದು ಕಂಕಣವಾಡಿ, ಸತ್ತೆಪ್ಪಾ ಬಡಾಯಿ,ರಾಜು ಜಕ್ಕನಟ್ಟಿ, ಹಣಮಂತ ಕೆಂದಾರಿ, ಇಕ್ಬಾಲ್ ಸರ್ಕವಸ್, ಅಶೋಕ ಬಂಡಿವಡ್ಡರ, ಕುಮಾರ್ ಪೂಜೇರಿ, ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಪಟ್ಟಣ ಪಂಚಾಯತ ಸದಸ್ಯರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.