Breaking News

ದಳವಾಯಿಯನ್ನು ತಿರಸ್ಕರಿಸಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ಗೆಲ್ಲಿಸಲು ಒಮ್ಮತದ ನಿರ್ಣಯ ಕೈಕೊಂಡ ಅರಭಾವಿ ಕ್ಷೇತ್ರದ ಹಾಲು ಮತ ಸಮಾಜ*

Spread the love

*ದಳವಾಯಿಯನ್ನು ತಿರಸ್ಕರಿಸಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ಗೆಲ್ಲಿಸಲು ಒಮ್ಮತದ ನಿರ್ಣಯ ಕೈಕೊಂಡ ಅರಭಾವಿ ಕ್ಷೇತ್ರದ ಹಾಲು ಮತ ಸಮಾಜ*

*ಹಾಲುಮತ ಸಮಾಜದ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚ್ಯುತಿ ತಂದಿಲ್ಲ- ಬಾಲಚಂದ್ರ ಜಾರಕಿಹೊಳಿ*

*ಮೂಡಲಗಿ:* ನನ್ನ ರಾಜಕೀಯ ಏಳ್ಗೆಯಲ್ಲಿ ಹಾಲುಮತ ಸಮಾಜದ ಪಾತ್ರ ಮಹತ್ತರವಿದ್ದು, ೧೯೯೨ರಿಂದ ಈ ಸಮಾಜವು ನಮ್ಮ ಕುಟುಂಬದ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಿ ನಿಂತಿದೆ. ಹಾಲುಮತ ಸಮಾಜದವರು ಈ ಬಾರಿ ಪ್ರತಿಶತ ೯೫ರಷ್ಟು ಮತಗಳನ್ನು ನನಗೆ ನೀಡಿದರೆ ದೊಡ್ಡ ಪ್ರಮಾಣದಲ್ಲಿ ಗೆಲುವನ್ನು ದಾಖಲಿಸಲು ಅನುಕೂಲವಾಗುತ್ತದೆ ಎಂದು ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮಾಜ ಬಾಂಧವರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.
ಅವರು, ರವಿವಾರದಂದು ಪಟ್ಟಣದ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಹಾಲುಮತ ಸಮಾಜ ಬಾಂಧವರು ತಮ್ಮ ಬೆಂಬಲಾರ್ಥವಾಗಿ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿ, ಹಾಲುಮತ ಸಮಾಜವು ನಂಬಿಕೆಯನ್ನು ಉಳಿಸಿಕೊಂಡು ಹೋಗುವಂತೆ ಮನವಿ ಮಾಡಿದರು.
೧೯೯೨ರಲ್ಲಿ ಪ್ರಾರಂಭಗೊಂಡ ತಮ್ಮ ಕುಟುಂಬದ ರಾಜಕೀಯದಲ್ಲಿ ಈ ಸಮಾಜವು ನಮಗೆ ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತ ಬರುತ್ತಿದೆ. ನಂಬಿಕೆ ಮತ್ತು ವಿಶ್ವಾಸಕ್ಕೆ ಹೆಸರುವಾಸಿಯಾದ ಈ ಸಮಾಜವು ಪ್ರತಿಸಲ ನನಗೆ ತಮ್ಮ ಆಶೀರ್ವಾದ ಮಾಡುತ್ತ ಬರುತ್ತಿದ್ದರೂ ೨೦೧೮ರ ಚುನಾವಣೆಯಲ್ಲಿ ಈ ಸಮಾಜದಿಂದ ನನಗೆ ಶೇ೭೦ರಷ್ಟು ಮತಗಳು ಬಂದಿದ್ದವು. ಈ ಬಾರಿ ಶೇ೯೦ ರಿಂದ ೯೫ರ ತನಕ ಮತಗಳು ಬೀಳಲು ಸಮಾಜ ಬಾಂಧವರು ಪ್ರಯತ್ನಿಸಬೇಕು. ಸಮಾಜವು ಹೆಚ್ಚಿನ ಪ್ರಮಾಣದಲ್ಲಿ ಕಾಳಜಿ ವಹಿಸಿಕೊಂಡು ಪ್ರತಿ ಬೂತ್ ಮಟ್ಟದಲ್ಲಿ ಕೆಲಸವನ್ನು ಮಾಡಬೇಕು. ಅಭಿವೃದ್ಧಿಯನ್ನು ಮಾಡುತ್ತಿರುವವರಿಗೆ ಬೆಂಬಲವನ್ನು ನೀಡುವಂತೆ ತಿಳಿಸಿದರು.
ಹಾಲುಮತ ಸಮಾಜಕ್ಕೆ ಸೇರಿರುವ ಎಲ್ಲ ಕಾರ್ಯಕರ್ತರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಟ್ಟಿರುವೆ. ಪ್ರೀತಿ ವಿಶ್ವಾಸಕ್ಕೆ ಎಂದಿಗೂ ಧಕ್ಕೆ ತಂದಿಲ್ಲ. ಈ ಸಮಾಜವೂ ಸೇರಿದಂತೆ ಕ್ಷೇತ್ರದ ಎಲ್ಲ ಸಮಾಜಗಳು ಸಹ ನನ್ನನ್ನು ತಮ್ಮ ಮನೆಯ ಮಗನಂತೆ ಹರಿಸಿ ಆಶೀರ್ವಾದ ಮಾಡುತ್ತ ಬರುತ್ತಿದ್ದಾರೆ. ಈ ಸಮಾಜಕ್ಕೂ ಕೂಡ ಸಾಕಷ್ಟು ಪ್ರಾಶಸ್ತ್ಯ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸಮಾಜದ ಬೇಡಿಕೆಯಂತೆ ಎಲ್ಲವನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದೊಡ್ಡ ಮಟ್ಟದ ಅಧಿಕಾರವನ್ನು ನೀಡಲಿಕ್ಕೆ ಎಲ್ಲ ಹಂತದಲ್ಲಿಯೂ ಪ್ರಯತ್ನಿಸುತ್ತೇನೆ. ಸಾಮಾಜಿಕ ನ್ಯಾಯದ ತತ್ವದಡಿ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಅವರು ತಿಳಿಸಿದರು.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಜನರಿಗೆ ಎಲ್ಲ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದ್ದೇನೆ. ಸರಕಾರದ ಅನುದಾನ ಬಿಡುಗಡೆಯಾಗಲು ವಿಳಂಬವಾದರೆ ನಾನೇ ಸ್ವತಃ ದುಡ್ಡು ಹಾಕಿ ರಸ್ತೆಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ರಸ್ತೆಗೆ ಒಂದು ಹಿಡಿ ಮಣ್ಣು ಹಾಕದ ಅಭ್ಯರ್ಥಿಯೊಬ್ಬರು ಐದು ವರ್ಷಕ್ಕೊಮ್ಮೆ ಬಂದು ಜನರಿಗೆ ಮುಖ ತೋರಿಸುತ್ತಾರೆ. ಅವರಿಗೆ ಮಣೆ ಹಾಕಬೇಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧನಾಗಿ ದುಡಿಯುತ್ತಿರುವ ನನಗೆ ನಿಮ್ಮ ಅಮೂಲ್ಯ ಮತ ನೀಡಿ ಆಶೀರ್ವಾದ ಮಾಡಿ. ನಿಮ್ಮಗಳ ಸೇವೆಗೆ ಸದಾ ಸಿದ್ಧನಾಗಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪ್ರದೇಶ ಕುರುಬರ ಸಂಘದ ನಿರ್ದೇಶಕ ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ನಮ್ಮ ಸಮಾಜಕ್ಕೂ ಜಾರಕಿಹೊಳಿ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ರಾಜ್ಯದಲ್ಲಿಂದು ಜಾರಕಿಹೊಳಿ ಸಾಮ್ರಾಜ್ಯ ವಿಸ್ತರಣೆಯಾಗಿದೆ ಎಂದರೇ ಅದಕ್ಕೆ ನಮ್ಮ ಸಮಾಜವೇ ಕಾರಣವಾಗಿದೆ. ಜೊತೆಗೆ ಈ ಕುಟುಂಬವು ರಾಜಕೀಯಕ್ಕೆ ಬರಲು ಸಹ ನಾವೇ ಕಾರಣರು. ಬಾಲಚಂದ್ರ ಜಾರಕಿಹೊಳಿ ಅವರನ್ನು ಒಬ್ಬ ಕುಟುಂಬದ ಸದಸ್ಯನಂತೆ ನಾವೆಲ್ಲರೂ ಭಾವಿಸಿದ್ದೇವೆ. ಅವರು ಕೂಡ ನಮಗೆಲ್ಲ ಪಾಲಿಟಿಕಲ್ ಪಾವರ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಇನ್ನೂ ಹೆಚ್ಚಿನ ರಾಜಕೀಯ ಅಧಿಕಾರವನ್ನು ನೀಡುವಂತೆ ಆಗ್ರಹಿಸಿದರು. ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಅರವಿಂದ ದಳವಾಯಿ ಅವರ ಸಾಧನೆ ಶೂನ್ಯವಾಗಿದೆ. ನಮ್ಮ ಸಮಾಜಕ್ಕೂ ಯಾವ ಕೊಡುಗೆಯನ್ನು ಸಹ ನೀಡಿಲ್ಲ. ದಳವಾಯಿ ಅವರನ್ನು ತಿರಸ್ಕರಿಸಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮತ ನೀಡಿ ಆಯ್ಕೆ ಮಾಡುವಂತೆ ಕೋರಿದರು.
ಟಿಎಪಿಸಿಎಮ್‌ಎಸ್ ಉಪಾದ್ಯಕ್ಷ ವಿಠ್ಠಲ ಪಾಟೀಲ ಮಾತನಾಡಿ, ಅರವಿಂದ ದಳವಾಯಿ ಅವರ ಬೆಂಬಲಕ್ಕೆ ಯಾರು ನಿಲ್ಲಬಾರದು. ಎಲ್ಲರೂ ಒಮ್ಮತದಿಂದ ನಮ್ಮೆಲ್ಲರ ನೆಚ್ಚಿನ ನಾಯಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮತ ನೀಡೋಣ. ಈ ಮೂಲಕ ಅವರ ಕೈಗಳನ್ನು ಬಲಪಡಿಸೋಣ. ನಮ್ಮ ಸಮಾಜಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ಮಾಡಿರುವ ಋಣವನ್ನು ಮತ ಹಾಕುವ ಮೂಲಕ ತೀರಿಸೋಣವೆಂದು ತಿಳಿಸಿದರು.
ವೇದಿಕೆಯಲ್ಲಿ ಕೊಲ್ಹಾಪೂರದ ಬಿಜೆಪಿ ಮುಖಂಡ ಮಹೇಶ ಜಾಧವ, ಮೂಡಲಗಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಡಾ.ಎಸ್ ಎಸ್ ಪಾಟೀಲ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಜಿಪಂ ಮಾಜಿ ಸದಸ್ಯರಾದ ರಂಗಪ್ಪ ಇಟ್ಟನ್ನವರ, ಭೀಮಶಿ ಮಗದುಮ, ಪ್ರಭಾ ಶುರ‍್ಸ ನಿರ್ದೇಶಕರಾದ ಸಿದ್ದಲಿಂಗ ಕಂಬಳಿ, ಗಿರೀಶ ಹಳ್ಳೂರ, ಲಕ್ಷ್ಮಣ ಗಣಪ್ಪಗೋಳ, ತಾಪಂ ಮಾಜಿ ಸದಸ್ಯರಾದ ಲಕ್ಷ್ಮಣ ಮಸಗುಪ್ಪಿ, ನಾಗಪ್ಪ ಮಂಗಿ, ಬಿ ಬಿ ಪೂಜೇರಿ, ಮಲ್ಲಿಕಾರ್ಜುನ ವಡೇರ, ಬಸು ಕೋಣಿ, ಮುಖಂಡರಾದ ಮನು ಗಡಾದ, ರಾಮಕೃಷ್ಣ ಹೊರಟ್ಟಿ, ರಾಮಚಂದ್ರ ಪಾಟೀಲ, ಬಸವರಾಜ ಪಂಡ್ರೋಳಿ, ಸುನೀಲ ಎತ್ತಿನಮನಿ, ಮಾರುತಿ ಮರಡಿ, ವೀರಣ್ಣ ಮೋಡಿ, ಅಡಿವೆಪ್ಪ ಹಾದಿಮನಿ, ಶಿವು ಕಮತಿ, ವಿನಾಯಕ ಕಟ್ಟಿಕಾರ, ಸಂಗಪ್ಪ ಕಂಟಿಕಾರ, ಜಡೇಪ್ಪ ಮಂಗಿ ಸೇರಿದಂತೆ ಅರಭಾವಿ ಮತಕ್ಷೇತ್ರದ ಎಲ್ಲ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಇಡೀ ಅರಭಾವಿ ಮತಕ್ಷೇತ್ರದ ಹಾಲುಮತ ಸಮಾಜ ಬಾಂಧವರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.


Spread the love

About Fast9 News

Check Also

ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ ಆಯ್ಕೆ

Spread the loveಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ …

Leave a Reply

Your email address will not be published. Required fields are marked *