Breaking News

ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ | ಮತ್ತೊಮ್ಮೆ ಅವಕಾಶ ಕಲ್ಪಿಸುವಂತೆ ಬಾಲಚಂದ್ರ ಮನವಿ

Spread the love

*ಸರ್ವ ಸಮುದಾಯಗಳ ಏಳಿಗೆಗೆ ಬಾಲಚಂದ್ರ ಬದ್ಧ
ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ | ಮತ್ತೊಮ್ಮೆ ಅವಕಾಶ ಕಲ್ಪಿಸುವಂತೆ ಬಾಲಚಂದ್ರ ಮನವಿ
————
*ಮೂಡಲಗಿ*: ಮತಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಗೆ ಕ್ಷೇತ್ರಕ್ಕೆ ಸಾಕಷ್ಟು ಮೂಲಸೌಕರ‌್ಯಗಳನ್ನು ನನ್ನ ಅವಧಿಯಲ್ಲಿ ಒದಗಿಸಿರುವೆ. ಈಗಾಗಲೇ ಹಲವು ಶಾಶ್ವತ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ, ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿಸುವ ಪಣ ತೊಡಲಾಗಿದೆ. ಹೀಗಾಗಿ ಈ ಅವಧಿಗೂ ತಮಗೆ ಮತ್ತೊಂದು ಅವಕಾಶ ಕಲ್ಪಿಸಬೇಕು ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.
ಮೂಡಲಗಿ-ಗುರ್ಲಾಪುರ ಪುರಸಭೆ, ನಾಗನೂರ, ಕಲ್ಲೊಳಿ, ಅರಬಾವಿ ಪಟ್ಟಣ ಪಂಚಾಯತಿ, ಹಳ್ಳೂರ, ಕೌಜಲಗಿ, ತುಕ್ಕಾನಟ್ಟಿ, ವಡೆಯರಹಟ್ಟಿ, ಯಾದವಾಡ, ಮೆಣವಂಕಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿರುವೆ. ಅದರಂತೆ ಆ ಸರ್ವ ಸಮುದಾಯಗಳ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಶಿಕ್ಷಣ, ಆರೋಗ್ಯ, ರಸ್ತೆ, ಕೃಷಿ, ನೀರಾವರಿ, ಸಾರಿಗೆ ಸೇರಿದಂತೆ ಶಾಶ್ವತ ಯೋಜನೆಗಳನ್ನು ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಗೊಳಿಸಲಾಗಿದೆ. ಇನ್ನುಳಿದ ಎಲ್ಲ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಅಭಿವೃದ್ಧಿಗೆ ಪೂರಕವಾದ ಎಲ್ಲ ಯೋಜನೆಗಳನ್ನು ಕಾರ್ಯಗತ ಮಾಡುವುದಕ್ಕೆ ಮತ್ತೊಂದು ಅವಕಾಶವನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ವೀರಶೈವ ಲಿಂಗಾಯತ, ಹಾಲುಮತ ಹಾಗೂ ಭಗೀರಥ ಉಪ್ಪಾರ ಸಮಾಜ, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ಸಮುದಾಯಗಳ ಏಳಿಗೆಗೆ ಶ್ರಮಿಸಿರುವೆ. ಸರ್ಕಾರದ ಅನುದಾನದಲ್ಲಷ್ಟೆ ಅಲ್ಲದೇ ವೈಯಕ್ತಿವಾಗಿಯೂ ಸಹಾಯ ಮಾಡುವ ಮೂಲಕ ಅವರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದ ಅವರು, ಕ್ಷೇತ್ರದ ಜನತೆಯ ಸೇವೆಗೆ ತಾವೆಲ್ಲ ಅವಕಾಶ ಕೊಟ್ಟಿರುವುದು ನನ್ನ ಭಾಗ್ಯ. ಇನ್ನಷ್ಟು ಕೆಲಸಗಳನ್ನು ಮಾಡಲು ಎಲ್ಲ ನನ್ನನ್ನು ಬೆಂಬಲಿಸಿ ಆರಿಸಿ ತರಬೇಕು ಎಂದು ಕೋರಿದರು.
ಹಿಂದುಳಿದ ಸಮಾಜದ ಮಕ್ಕಳಿಗೆ ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ ಅವಶ್ಯವಿರುವ ಮೀಸಲಾತಿಗೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದ ಅವರು, ಕೊರೋನಾ ಸಂದರ್ಭದಲ್ಲಿ ಯಾವ ಪಕ್ಷ, ಮತ ಭೇದವಿಲ್ಲದೆ ಎಲ್ಲರಿಗೂ ಸರಿ ಸಮಾನವಾಗಿ ಸಹಾಯ ಮಾಡಿರುವೆ. ಜತೆಗೆ ಅವರೆಲ್ಲರಿಗೂ ಆತ್ಮಸ್ಥೈರ್ಯ ತುಂಬುವ ಕೆಲಸವನ್ನೂ ಮಾಡಿರುವೆ. ಸಂಕಷ್ಟದ ಸಂದರ್ಭದಲ್ಲಿ ಕ್ಷೇತ್ರದ ಜನರೊಂದಿಗೆ ನಾನು ಸದಾ ಇರುತ್ತೇನೆ ಎಂದು ಭರವಸೆ ನೀಡಿದ ಅವರು, ಅವರ ಸಂಕಷ್ಟಗಳಿಗೆ ಹಗಲು ರಾತ್ರಿಯೆನ್ನದೆ ಶ್ರಮಿಸುತ್ತೇನೆ ಎಂದು ಹೇಳಿದರು.
ಮೇ ೧೦ ರಂದು ನಡೆಯುವ ಚುನಾವಣೆಯಲ್ಲಿ ನನಗೆ ಅತ್ಯಂತ ಹೆಚ್ಚಿನ ಮತಗಳನ್ನು ತಂದು ಕೊಡಬೇಕು ಎಂದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳು ಪೂರ್ಣಗೊಂಡಿದ್ದು, ಇನ್ನಷ್ಟು ಹೊಸ ಯೋಜನೆಗಳೊಂದಿಗೆ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದೇನೆ. ಹೀಗಾಗಿ ತಮಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದ ಜನರಿಗೆ ಅಗತ್ಯವಿರುವ ಸಕಲ ಸೌಕರ‌್ಯಗಳನ್ನು ಒದಗಿಸಿಕೊಟ್ಟಿರುವೆ. ಅಭಿವೃದ್ಧಿ ಕಾರ್ಯಗಳಲ್ಲಿ ನಾನೆಂದೂ ಪಕ್ಷಪಾತ ಮಾಡಿಲ್ಲ, ತಾರತಮ್ಯವನ್ನೂ ಮಾಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸಿರುವೆ. ಈ ಕಾರಣಕ್ಕಾಗಿಯೇ ಕ್ಷೇತ್ರದಲ್ಲಿ ಎಲ್ಲ ಸಮುದಾಯದವರು ಸಾಮರಸ್ಯದಿಂದ ಬದುಕುತ್ತಿರುವುದೇ ಸಾಕ್ಷಿಯಾಗಿದೆ. ಕ್ಷೇತ್ರದಲ್ಲಿ ರೈತ ಸಮುದಾಯದ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತಹ ನೀರಾವರಿ ಯೋಜನೆಗಳನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದು, ರೈತರ ಬದುಕು ಇನ್ನಷ್ಟು ಹಸನಾಗಿಸುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.

ಕಳೆದ ೨೦ ವರ್ಷಗಳಿಂದ ಕ್ಷೇತ್ರದಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಬಲತೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿ, ಅವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬಂದಿರುವೆ. ಜತೆಗೆ ಕ್ಷೇತ್ರದ ಜನರ ಬೇಡಿಕೆಗಳಿಗೆ ಪಕ್ಷಭೇದವಿಲ್ಲದೆ, ಧರ್ಮಭೇದವಿಲ್ಲದೆ ಸ್ಪಂದಿಸುತ್ತಾ ಬಂದಿರುವೆ. ಈ ಮೂಲಕ ಕ್ಷೇತ್ರದ ಅಭಿವೃದ್ಧಿಯೊಂದೇ ಈಗ ನನ್ನ ಮುಂದಿರುವ ಸವಾಲಾಗಿದೆ. ಮುಂದೆಯೂ ಅಭಿವೃದ್ಧಿಗಾಗಿಯೇ ಒತ್ತು ನೀಡುತ್ತೇನೆ. ಈ ಚುನಾವಣೆಯಲ್ಲಿ ನನ್ನ ದಾಖಲೆಯ ಗೆಲುವಿಗಾಗಿ ಮತಪಟ್ಟಿಗೆಯಲ್ಲಿ ನಂ.೫ರ ಕಮಲದ ಗುರ್ತಿಗೆ ಮತ ನೀಡಿ, ಮತ್ತೊಮ್ಮೆ ತಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕು.


Spread the love

About Fast9 News

Check Also

ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ ಆಯ್ಕೆ

Spread the loveಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ …

Leave a Reply

Your email address will not be published. Required fields are marked *