Breaking News

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ “ಅಹಂ” ಮುರಿಯಲು ಬಂಡಾಯವೆದ್ದ ನಿರ್ದೇಶಕರು

Spread the love

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ “ಅಹಂ” ಮುರಿಯಲು ಬಂಡಾಯವೆದ್ದ ನಿರ್ದೇಶಕರು

ಬೆಳಗಾವಿ : ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಸಭೆಗೆ 10 ಜನ ನಿರ್ದೇಶಕರು ಗೈರು ಹಾಜರಾಗುವ ಮೂಲಕ ಅಧ್ಯಕ್ಷ ರಮೇಶ ಕತ್ತಿ ಅವರ ಸರ್ವಾಧಿಕಾರತ್ವಕ್ಕೆ ಸೆಡ್ಡು ಹೊಡೆದಿದ್ದಾರೆ.
ಶನಿವಾರ ದಿನಾಂಕ 18 ರಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಆಡಳಿತ ಮಂಡಳಿಯ ಸಭೆ ನಿಗದಿಯಾಗಿತ್ತು. ಆದರೆ ಕೇವಲ 5 ಜನರು ಮಾತ್ರ ಇದರಲ್ಲಿ ಪಾಲ್ಗೊಂಡಿದ್ದರು. ದಿ. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಸಭೆಯ ಕೋರಂಗೆ ಕನಿಷ್ಠ 9 ಜನ ನಿರ್ದೇಶಕರ ಅವಶ್ಯಕತೆ ಇದ್ದರೂ ಸಹ ಸಭೆಯನ್ನು ಮುಂದೂಡಿಲ್ಲ. ರಮೇಶ ಕತ್ತಿ ಅವರ ದಬ್ಬಾಳಿಕೆಗೆ ಬೇಸತ್ತಿರುವ ಬ್ಯಾಂಕಿನ ನಿರ್ದೇಶಕರು ಈ ಸಭೆಯಲ್ಲಿ ಪಾಲ್ಗೊಳ್ಳದೇ ಕತ್ತಿ ಅವರ ಅಹಂ ಧೋರಣೆಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದು, ಕೋರಂ ಇಲ್ಲದೇ ಸಭೆಯನ್ನು ನಡೆಸಿರುವುದು ನ್ಯಾಯ ಸಮ್ಮತವಲ್ಲವೆಂದು ಆಪಾದಿಸಿದ್ದಾರೆ.
ಈ ಬಗ್ಗೆ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿರುವ ನಿರ್ದೇಶಕರುಗಳು ರಮೇಶ ಕತ್ತಿ ಅವರು ಕರೆದ ಸಭೆಗೆ ಕೇವಲ 5 ಜನ ನಿರ್ದೇಶಕರು ಮಾತ್ರ ಭಾಗವಹಿಸಿದ್ದಾರೆ. ಇನ್ನುಳಿದ 10 ಜನ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿಲ್ಲ. ಇಷ್ಟಾಗಿಯೂ ಕೇವಲ 5 ಜನರನ್ನು ಇಟ್ಟುಕೊಂಡು ಸಭೆ ನಡೆಸಿರುವುದು ಕಾನೂನು ಬಾಹೀರವಾಗಿದೆ. ಕೋರಂ ಇಲ್ಲದ ಈ ಸಭೆಯಲ್ಲಿ ಯಾವುದೇ ವಿಷಯಗಳನ್ನು ಪಾಸು ಮಾಡದೇ ಸಭೆಯನ್ನು ಮುಂದೂಡುವಂತೆಯೂ ಕೆಲ ಅತೃಪ್ತ ನಿರ್ದೇಶಕರು ಲಿಖಿತವಾಗಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ನಿನ್ನೆ ಶನಿವಾರದಂದು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ 16 ಜನರ ಪೈಕಿ ಕೇವಲ 5 ಜನರು ಪಾಲ್ಗೊಂಡಿದ್ದಾರೆ. ಇದರಲ್ಲಿ ರಮೇಶ ಕತ್ತಿ, ಅಣ್ಣಾಸಾಬ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ, ಸತೀಶ ಕಡಾಡಿ, ಶಿವಾನಂದ ಡೋಣಿ ಅವರು ಸಭೆಯಲ್ಲಿ ಭಾಗವಹಿಸಿದ್ದಾರೆ. ಇನ್ನುಳಿದ ಆನಂದ ಮಾಮನಿ, ಲಕ್ಷö್ಮಣ ಸವದಿ, ಅರವಿಂದ ಪಾಟೀಲ ಮತ್ತು ಪಂಚನಗೌಡ ದ್ಯಾಮನಗೌಡರ ಅವರು ಸಭೆಯಲ್ಲಿ ಕೆಲ ಕಾರಣಗಳಿಂದ ಭಾಗವಹಿಸಿಲ್ಲ. ಜೊತೆಗೆ ನಾವು ಸಹ ನಮ್ಮ 6 ಜನ ಸಂಗಡಿಗ ನಿರ್ದೇಶಕರೊಂದಿಗೆ ಈ ಸಭೆಯಲ್ಲಿ ಭಾಗಿಯಾಗಿಲ್ಲವೆಂದು ಅತೃಪ್ತ ಗುಂಪಿನ ಸುಭಾಸ ಢವಳೇಶ್ವರ ಅವರು ಹೇಳಿದ್ದಾರೆ.
ವಾಸ್ತವಾಂಶ ಹೀಗಿದ್ದರೂ ಅಧ್ಯಕ್ಷ ರಮೇಶ ಕತ್ತಿ ಅವರು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರೊಂದಿಗೆ ಕೂಡಿಕೊಂಡು ನಿರ್ದೇಶಕರ ಮನೆಗಳಿಗೆ ಹೋಗಿ ಠರಾವು ಪುಸ್ತಕಕ್ಕೆ ಸಹಿ ಮಾಡಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಭೆ ಕಾನೂನು ಬಾಹೀರದಿಂದ ಕೂಡಿದ್ದು, ಕೂಡಲೇ ಈ ಸಭೆಯನ್ನು ಮುಂದೂಡಬೇಕು. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಯಾವುದೇ ಕಾರಣಕ್ಕೂ ಪಾಸು ಮಾಡುವಂತಿಲ್ಲವೆಂದು ಅತೃಪ್ತರು ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಡಿಸಿಸಿ ಬ್ಯಾಂಕಿನ ಇತಿಹಾಸದಲ್ಲಿಯೇ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಕೋರಂ ಇಲ್ಲದೇ ಸಭೆ ನಡೆಸಿರುವುದು ಇದೇ ಪ್ರಥಮ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ರಮೇಶ ಕತ್ತಿ ವಿರುದ್ಧ ಸ್ವತಃ ಅವರ ನಿರ್ದೇಶಕರುಗಳೇ ಬಂಡಾಯವೆದ್ದಿರುವುದು ಕತ್ತಿ ಅವರ ನಾಯಕತ್ವವನ್ನು ಪ್ರಶ್ನಿಸುವಂತಾಗಿದೆ. ನಿನ್ನೆಯ ಸಭೆಯಲ್ಲಿ ಕೇವಲ 5 ಜನರು ಪಾಲ್ಗೊಂಡಿದ್ದು, ಈ ಬಗ್ಗೆ ಸ್ವತಃ ನಮಗೆ ಸಭೆಯನ್ನು ರದ್ದುಪಡಿಸಲಾಗಿದೆ. ಸಭೆಯನ್ನು ಮತ್ತೇ ಕರೆಯುತ್ತೇವೆ ಎಂದು ಹೇಳಿದ್ದರೂ ಸಹ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರುಗಳ ಮನೆಗಳಿಗೆ ಹೋಗಿ ಠರಾವು ಪುಸ್ತಕಗಳಿಗೆ ಸಹಿ ಮಾಡಿಸುತ್ತಿದ್ದಾರೆ. ಸಭೆ ಮುಂದೂಡಲಾಗಿದೆ ಎಂದು ಹೇಳಿಕೊಳ್ಳುತ್ತಿರುವ ಬ್ಯಾಂಕಿನ ಅಧ್ಯಕ್ಷರು ಮತ್ತೇ ಸಹಿ ಮಾಡಿಸುತ್ತಿರುವುದನ್ನು ಗಮನಿಸಿದರೆ ಸಭೆ ನಡೆಸಿದಂತೆಯೇ ಕಾಣುತ್ತಿದೆ ಎಂದು ಅತೃಪ್ತ ಗುಂಪಿನ ನಿರ್ದೇಶಕರುಗಳು ಅಧ್ಯಕ್ಷ ರಮೇಶ ಕತ್ತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕರಾದ ರಾಜು ಅಂಕಲಗಿ, ನೀಲಕಂಠ ಕಪ್ಪಲಗುದ್ದಿ, ಅಣ್ಣಾಸಾಬ ಕುಲಗುಡೆ, ಕೃಷ್ಣಾ ಅನಗೋಳಕರ ಮತ್ತು ಶಂಕರಗೌಡ ಪಾಟೀಲ ಅವರು ನಿನ್ನೆ ಶನಿವಾರದಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಸಲ್ಲಿಸುವ ಮೂಲಕ ಅಧ್ಯಕ್ಷ ರಮೇಶ ಕತ್ತಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *