Breaking News

ರೇವಣಸಿದ್ಧೇಶ್ವರ ಗವೀಮಠದ ಮಹಿಮೆ ಅಪಾರವಾದದ್ದು- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

Spread the love

*ರೇವಣಸಿದ್ಧೇಶ್ವರ ಗವೀಮಠದ ಮಹಿಮೆ ಅಪಾರವಾದದ್ದು- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

*ಗವೀಮಠದಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ*

*ಮೂಡಲಗಿ* ಮೂಡಲಗಿಯ ಮೂಲ ದೇವರೆಂದೇ ಭಕ್ತರಿಂದ ಕರೆಸಿಕೊಳ್ಳುವ ರೇವಣಸಿದ್ಧ ಗವಿಮಠದ ಮಹಿಮೆ ಅಪಾರವಾದುದ್ದು. ಮಠದ ಭಕ್ತ ವೃಂದದವರ ಆಶಯದಂತೆ ಮುಖ್ಯ ರಸ್ತೆಯಿಂದ ಗವಿಮಠದವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ರೇವಣಸಿದ್ಧೇಶ್ವರ ಗವಿ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗವಿಮಠವು ಇಲ್ಲಿಯ ಆರಾಧ್ಯದೈವವಾಗಿರುವ ಶಿವಬೋಧರಂಗ ಮಠದಂತೆಯೇ ಪ್ರಸಿದ್ಧಿಯಾಗಿದೆ. ಸಿದ್ಧ ಸಂಸ್ಥಾನಮಠದ ಮೂಲ ಪೀಠಾಧಿಪತಿಗಳು ಮೂಡಲಗಿಯಲ್ಲಿ ನೆಲೆಯೂರಲು ರೇವಣಸಿದ್ಧೇಶ್ವರರು ಮೂಲ ಕಾರಣರು ಎಂದು ಇತಿಹಾಸದಿಂದ ತಿಳಿದು ಬಂದಿದೆ ಅವರು ತಿಳಿಸಿದರು.
ಮೂಡಲಗಿ ಹೊಸ ತಾಲೂಕಿನ ಅಭಿವೃದ್ಧಿಗೆ ಬದ್ಧರಿರುವುದಾಗಿ ಸ್ಪಷ್ಟಪಡಿಸಿದ ಅವರು, ತಾಲ್ಲೂಕು ಮಟ್ಟದ ಕಛೇರಿಗಳನ್ನು ಮಂಜೂರು ಮಾಡಿಸುವ ಪ್ರಕ್ರಿಯೆಯು ಚಾಲನೆಯಲ್ಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಸರಕಾರಿ ಕಚೇರಿಗಳಿಗೆ ತೆರಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲ ಕಚೇರಿಗಳು ಒಂದೇ ಕಟ್ಟಡಗಳಲ್ಲಿ ಕೆಲಸ ನಿರ್ವಹಿಸಲು ಮಿನಿ ವಿಧಾನ ಸೌಧ ನಿರ್ಮಿಸಲಾಗುವುದು. ಇದಕ್ಕಾಗಿ ಈಗಾಗಲೇ ಸ್ಥಳ ಗುರುತಿಸಲಾಗಿದೆ ಎಂದು ಹೇಳಿದರು.
ಮೂಡಲಗಿ ಪಟ್ಟಣದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ರಸ್ತೆಗಳ ನಿರ್ಮಾಣ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುತುವರ್ಜಿಯಿಂದ ಕೆಲಸ ಮಾಡಲಾಗುತ್ತಿದೆ. ಪಟ್ಟಣದ ಮುಖ್ಯ ಮತ್ತು ಒಳಗಿನ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಮೂಡಲಗಿ ಪಟ್ಟಣಕ್ಕೆ ಸಂಪರ್ಕ ಸಾಧಿಸಲು ಸುತ್ತಮುತ್ತಲಿನ ಗ್ರಾಮಗಳ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗುತ್ತಿದೆ. ಗುರ್ಲಾಪೂರದಿಂದ ಮುಸಗುಪ್ಪಿವರೆಗಿನ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಇಲ್ಲಿಯ ನಾಗರೀಕರು ತುಂಬಾ ದಿನಗಳಿಂದ ಗವಿಮಠದ ರಸ್ತೆಯನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ‌ಅವರ ಮನವಿಯ ಮೇರೆಗೆ ಗವಿಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತಮ್ಮ ಸ್ವಂತ ದುಡ್ಡಿನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಮುಖಂಡ ರವೀಂದ್ರ ಸೋನವಾಲ್ಕರ, ಚನಬಸಯ್ಯ ನಿರ್ವಾಣಿ, ವೇದಮೂರ್ತಿ ಶಂಕರಯ್ಯ ಹೀರೇಮಠ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಮಲ್ಲಿಕಾರ್ಜುನ ಢವಳೇಶ್ವರ, ಪುರಸಭೆ ಸದಸ್ಯ ಈರಪ್ಪ ಮುನ್ಯಾಳ, ಗಿರೀಶ ಢವಳೇಶ್ವರ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಗವಿಮಠದ ರಸ್ತೆಯನ್ನು ನಿರ್ಮಿಸಿಕೊಟ್ಟು ಭಕ್ತರಿಗೆ ಅನುಕೂಲ ಮಾಡಿಕೊಟ್ಟಿರುವ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ರೀ ಮಠದಿಂದ ವೇದಮೂರ್ತಿ ಶಂಕರಯ್ಯ ಹೀರೇಮಠ ಅವರು ಸತ್ಕರಿಸಿದರು.

*ಫೋಟೋ- ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ರೇವಣಸಿದ್ಧೇಶ್ವರ ಗವಿಮಠದ ಪರವಾಗಿ ವೇದಮೂರ್ತಿ ಶಂಕರಯ್ಯ ಹೀರೇಮಠ ಅವರು ಸತ್ಕರಿಸಿದರು. ಚನಮಲ್ಲಯ್ಯ ನಿರ್ವಾಣಿ, ರವೀಂದ್ರ ಸೋನವಾಲಕರ, ಹನಮಂತ ಗುಡ್ಲಮನಿ, ಮಲ್ಲಿಕಾರ್ಜುನ ಢವಳೇಶ್ವರ ಮುಂತಾದವರು ಉಪಸ್ಥಿತರಿದ್ದರು.*


Spread the love

About Fast9 News

Check Also

ಚಿಕ್ಕೋಡಿ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ವಿಜಯಮಾಲೆ ಇಲ್ಲಿದೆ ಡಿಟೆಲ್ಸ್,,,?

Spread the loveಚಿಕ್ಕೋಡಿ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ವಿಜಯಮಾಲೆ ಇಲ್ಲಿದೆ ಡಿಟೆಲ್ಸ್,,,? ಚಿಕ್ಕೋಡಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ fast9news …

Leave a Reply

Your email address will not be published. Required fields are marked *