Breaking News

ಅರಭಾವಿ ಶ್ರೀಮಠದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ : ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love

ಅರಭಾವಿ ಶ್ರೀಮಠದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ : ಶಾಸಕ ಬಾಲಚಂದ್ರ ಜಾರಕಿಹೊಳಿ*

*ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಈ ಭಾಗದ ಸಕಲ ಭಕ್ತರಿಗೆ ಅಪಾರ ದುಃಖವಾಗಿದೆ. ಅತೀ ಸರಳತೆಯಿಂದ ಜೀವನ ಸಾಗಿಸಿರುವ ಹಿಂದಿನ ಶ್ರೀಗಳ ಸೇವೆಯನ್ನು ಎಷ್ಟು ಹೊಗಳಿದರು ಸಾಲದು. ಅವರು ಎಂದಿಗೂ ಆಡಂಬರದ ಜೀವನ ಸಾಗಿಸಲಿಲ್ಲ. ಎಂದಿಗೂ ಲಿಂಗಪೂಜೆಯನ್ನು ತಪ್ಪಿಸಲಿಲ್ಲ. ಅದಕ್ಕೆಂದೇ ಅವರು ಈ ಭಾಗದ ನಡೆದಾಡುವ ದೇವರು ಎಂದು ನಾವೆಲ್ಲರೂ ವ್ಯಾಖ್ಯಾನಿಸುತ್ತೇವೆ. ಈ ದಿನದ ಶುಭ ಘಳಿಗೆಯನ್ನು ನೋಡಿದಾಗ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ನಮ್ಮ ಮಧ್ಯೆಯೇ ಇದ್ದಾರೆ. ಸ್ವರ್ಗದಿಂದ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ಭಾವವಾಗುತ್ತದೆ ಎಂದು ಸ್ಮರಿಸಿಕೊಂಡರು.*
*ಶ್ರೀಮಠದ ಅಭಿವೃದ್ಧಿಗೆ ನಾವು ಸದಾ ಬದ್ಧರಿದ್ದೇವೆ. ಗುರುಬಸವಲಿಂಗ ಮಹಾಸ್ವಾಮಿಗಳಿಗೆ ಶ್ರೀಮಠವನ್ನು ಮುಂದುವರೆಸಿಕೊಂಡು ಹೋಗಲು ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತೇವೆ. ಹಿಂದಿನ ಮಹಾಸ್ವಾಮಿಗಳಂತೆ ಶ್ರೀಮಠದ ಪ್ರಗತಿಗೆ ಶ್ರಮಿಸಿ ಅರಭಾವಿ ಮಠವನ್ನು ಅಭಿವೃದ್ಧಿಗೊಳಿಸಲಿ. ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳ ಕನಸುಗಳನ್ನು ಇಡೇರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಆಶಿಸಿದರು.*

ಅರಭಾವಿ ಮಠದ ನೂತನ ಪೂಜ್ಯರಾಗಿ ಪೀಠಾರೋಹಣ ಮಾಡಿದ ಗುರುಬಸವಲಿಂಗ ಮಹಾಸ್ವಾಮಿಗಳು ತಮ್ಮ ಭಾಷಣದುದ್ದಕ್ಕೂ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳನ್ನು ನೆನೆದು ಭಾವುಕರಾದರು. ಹಲವು ಸಂದರ್ಭಗಳಲ್ಲಿ ಕಣ್ಣೀರು ಹಾಕುತ್ತ ತಮ್ಮ ಭಾಷಣವನ್ನು ಮುಂದುವರೆಸಿದರು. ಇದೊಂದು ವಿಶೇಷ ಘಳಿಗೆ. ನನ್ನ ಜೀವನದಲ್ಲಿ ಎಂದೂ ಮರೆಯದ ಸ್ಮರಣೀಯ ಘಟನೆ. ಈ ಘಳಿಗೆಯನ್ನು ನಾನೆಂದಿಗೂ ಊಹಿಸಿರಲಿಲ್ಲ. ಶ್ರೀಮಠದ ಪೀಠಾರೋಹಣ ಮಾಡುತ್ತೇನೆ ಎಂದು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಪೂಜ್ಯರನ್ನು ನೆನೆದು ಭಾವುಕರಾದರು.
ದುರದುಂಡೀಶ್ವರನ ಪಾವನ ಸಾನಿಧ್ಯದಲ್ಲಿ ಅರಭಾವಿ ಶ್ರೀಮಠವು ಹೆಮ್ಮರವಾಗಿ ಬೆಳೆದಿದೆ. ಈ ಮಠವು ಶೂನ್ಯ ಸಿಂಹಾಸನ ಮಠವಾಗಿದ್ದು, ಭಕ್ತರ ಪಾಲಿನ ಕಾಮಧೇನು, ಕಲ್ಪವೃಕ್ಷವಾಗಿದೆ. ತಮ್ಮ ಹಾಗೂ ಸಿದ್ಧಲಿಂಗ ಮಹಾಸ್ವಾಮಿಗಳ ಜೊತೆಗಿನ ಸಂಬಂಧಗಳನ್ನು ಮೆಲುಕು ಹಾಕಿದ ಅವರು ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಪಾಲಿನ ಗುರುಗಳು ಅಷ್ಟೇ ಅಲ್ಲ. ಅವರೊಬ್ಬ ದೇವರು ಎಂದು ಹೇಳಿದರು.
ಈ ಭಾಗದ ಸದ್ಭಕ್ತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಹಿಂದಿನ ಜಗದ್ಗುರುಗಳ ಆಶಯದಂತೆ ಪೀಠಾಧಿಪತಿಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಒದಗಿಬಂದಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಮಠದ ಉಳಿವಿಗಾಗಿ ಶ್ರಮಿಸುತ್ತೇನೆ. ದುರದುಂಡೀಶ್ವರನು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತೇನೆ. ನಾನೂ ಕೂಡ ಅರಭಾವಿ ಸಮೀಪದ ದುರದುಂಡಿ ಗ್ರಾಮದವನಾಗಿದ್ದರಿಂದ ಎಲ್ಲರ ಪರಿಚಯ ನನಗಿದೆ. ಹೀಗಾಗಿ ಶ್ರೀಮಠದ ಅಭಿವೃದ್ಧಿಯೊಂದೇ ನನ್ನ ಗುರಿಯಾಗಿದೆ. ನಿಡಸೋಶಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಹಾಗೂ ಗದಗ-ಢಂಬಳ ಪೀಠದ ಜಗದ್ಗುರು ಡಾ.ಸಿದ್ಧರಾಮ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಭಕ್ತರ ಸೇವೆಯನ್ನು ಮಾಡುವುದಾಗಿ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಂದಿಗುಂದ-ಆಡಿ ಸಿದ್ಧೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ನೋಡೋಕೆ ಸಿಂಹಾಸನ, ವೈಭವ ಆದರೆ ಇದರ ಹಿಂದೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಈ ಪೀಠದ ಹಾಸಿಗೆ ಹೂವಿನ ಹಾಸಿಗೆಯಲ್ಲ. ಇದೊಂದು ಮುಳ್ಳಿನ ಹಾಸಿಗೆ. ಶ್ರೀಮಠದ ಸಿಂಹಾಸನ ಅಲಂಕರಿಸಿರುವ ಗುರುಬಸವಲಿಂಗ ಮಹಾಸ್ವಾಮಿಗಳು ಭಕ್ತರ ಆಶಯದಂತೆ ಸೇವೆ ಸಲ್ಲಿಸಲಿ. ಅರಭಾವಿ ದುರದುಂಡೀಶ್ವರ ಮಠಕ್ಕೆ ತನ್ನದೇಯಾದ ಇತಿಹಾಸವಿದೆ. ದುರದುಂಡೀಶ್ವರನು ತನ್ನನ್ನು ತಾನು ಕಾಪಾಡಿಕೊಳ್ಳದೇ ಇಡೀ ಭಕ್ತರನ್ನು ಕಾಪಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಪೀಠಾಧಿಪತಿಗಳಾದವರು ಭಕ್ತರ ಭಾವನೆಗಳಿಗೆ ಸ್ಪಂದಿಸಬೇಕೇ ಹೊರತು ಐಶಾರಾಮಿ ಜೀವನ ಮಾಡುವುದಕ್ಕಲ್ಲ. ಇದಕ್ಕೆ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ತಕ್ಕ ಉದಾಹರಣೆಯಾಗಿದ್ದಾರೆ. ಅತೀ ಸರಳವಾಗಿ ಜೀವನ ಸಾಗಿಸಿ ಸಮಾಜಕ್ಕೆ ಮಾದರಿಯಾಗಿದ್ದರು ಎಂದು ಹೇಳಿದರು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಪೃಥ್ವಿ ಕತ್ತಿ, ನಿವೃತ್ತ ಪ್ರಾದೇಶಿಕ ಆಯುಕ್ತ ಡಾ. ಮಹಾಂತೇಶ ಹಿರೇಮಠ, ಅಶೋಕ ಪೂಜಾರಿ ಮುಂತಾದವರು ಮಾತನಾಡಿ, ಶ್ರೀಮಠದ ಪರಂಪರೆಯನ್ನು ಶ್ಲಾಘಿಸಿದರು. ಶ್ರೀಮಠದ ಏಳ್ಗೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಅಥಣಿ ಮೋಠಗಿಮಠದ ಪ್ರಭು ಚನ್ನಬಸವ ಮಹಾಸ್ವಾಮಿಗಳು ನುಡಿ ನೈವೈದ್ಯಗೈದರು.
ನೇತೃತ್ವವನ್ನು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಹುಬ್ಬಳ್ಳಿಯ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು, ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಮಹಾಸ್ವಾಮಿಗಳು, ಗುಬ್ಬಲಗುಡ್ಡದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಯಮಕನಮರಡಿಯ ರಾಚೋಟೇಶ್ವರ ಮಹಾಸ್ವಾಮಿಗಳು, ರಾಮದುರ್ಗದ ಶಾಂತವೀರ ಮಹಾಸ್ವಾಮಿಗಳು, ನಿಚ್ಚಳಿಕೆ ಪಂಚಾಕ್ಷರಿ ಮಹಾಸ್ವಾಮಿಗಳು, ಬಬಲಾದಿ ಮಠದ ಕರಿಗಿರೇಶ್ವರ ಸಂಗಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ವಿರುಪಾಕ್ಷ ಮಹಾಸ್ವಾಮಿಗಳು, ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು, ಸದಾನಂದ ಶಿವಾಚಾರ್ಯರು, ಗುರುಪಾದ ಶಿವಾಚಾರ್ಯ ಸ್ವಾಮಿಗಳು, ಶಿವಮೂರ್ತಿ ಮಹಾಸ್ವಾಮಿಗಳು, ಗುರುದೇವ ದೇವರು, ಸದಾನಂದ ಮಹಾಸ್ವಾಮಿಗಳು, ಸಚ್ಚಿದಾನಂದ ಮಹಾಸ್ವಾಮಿಗಳು, ಚನ್ನಮ್ಮ ಕಿತ್ತೂರಿನ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು, ನಾಗಭೂಷನ ಮಹಾಸ್ವಾಮಿಗಳು, ಸೇಗುಣಸಿಯ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಸೇರಿದಂತೆ ನಾಡಿನ ಹಲವಾರು ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ನಿಡಸೋಶಿ ಅರಭಾವಿ ಮಠದ ಮಹಾಸ್ವಾಮಿಗಳು ಜಂಟಿಯಾಗಿ ಸತ್ಕರಿಸಿದರು. ಎಸ್.ಕೆ. ಮಠ ಕಾರ್ಯಕ್ರಮ ನಿರೂಪಿಸಿದರು.


Spread the love

About Fast9 News

Check Also

ಅನೈತಿಕ ಸಂಬಂಧ,ಮನೆಗೆ ಕರೆಯಿಸಿ ಕೊಲೆ,, ಪತ್ನಿ ಆಸ್ಪತ್ರೆಯಲ್ಲಿ,,,

Spread the loveಅನೈತಿಕ ಸಂಬಂಧ,ಮನೆಗೆ ಕರೆಯಿಸಿ ಕೊಲೆ,, ಪತ್ನಿ ಆಸ್ಪತ್ರೆಯಲ್ಲಿ,,, ಒಂದು ವಿಷಯ ಮಾತಾಡೊದಿದೆ ಎಂದು ಮನೆಗೆ ಕರೆಯಸಿ ಮಾರಕಾಸ್ತ್ರಗಳಿಂದ …

Leave a Reply

Your email address will not be published. Required fields are marked *